Friday, 11 December 2015

                                                                          ಅವಳಂತರಾಳ.......                    


           ತನ್ನ ಬದುಕಿನ ಅಷ್ಟೂ ಸಮಯವನ್ನು ಅವನಿಗಾಗಿ ಕಳೆದಿದ್ದಳಾಕೆ,ಇದ್ದಾಗ ಅವನ ಜೊತೆ ಅವನಿಲ್ಲದಾಗ ಅವ ಜೊತೆ ಇದ್ದ ಕ್ಷಣದ ನೆನಪುಗಳ ಜೊತೆ......ಅವರಿಬ್ಬರ ನಡುವೆ ಸ್ನೇಹವೋ,ಪ್ರೀತಿಯೋ ಅಥವಾ ಮೋಹವೋ ಏನೋ..!!ಅಥವಾ ಅವೆಲ್ಲವೂ ಅವರಲ್ಲಿ ಬೆಸೆದಿತ್ತು....ಅವಳಂತೆ ಈ ಪ್ರಪಂಚದಲ್ಲಿ ಯಾರೂ ಯಾರನ್ನೂ ಪ್ರೀತಿಸಲಾರರು..ಸುದೀರ್ಘ ನಿಶ್ಕಲ್ಮಶ ಪ್ರೀತಿಯದು..ಮಾತಿನಲ್ಲಿ ಹೇಳಲಾಗದ,ಬರವಣಿಗೆಯಲ್ಲಿ ಗೀಚಲಾಗದ ಅವ್ಯಕ್ತ ಅಲೌಕಿಕ ಪ್ರೇಮವದು....!!    ಕೃಷ್ಣ... ರಾಧೆಯ ಏದುಸಿರು,ಅವಳ ಕಾತರ,ಅವಳ ದನಿ,ಅವಳ ನೆನಪು.....ನಿಜ ಕೃಷ್ಣ ರಾಧೆಯ ಅಂತರಾಳ......!!    
           
                  ಪ್ರೀತಿಗೆ ನಿಜವಾದ ಹೆಸರದು ರಾಧೆ..ತಮ್ಮ ಸರ್ವಸ್ವವನ್ನೆಲ್ಲವನ್ನೂ ಕೃಷ್ಣನಗಳಿಗರ್ಪಿಸಿದ ಪುಣ್ಯ ಸ್ತ್ರೀಯರಲ್ಲಿ  ಒಬ್ಬಳು ರಾಧೆ..ಭೌತಿಕ ಆಸೆ-ಆಕಾಂಕ್ಷೆಗಳನ್ನು ಮೂಲೆ ಗುಂಪಾಗಿಸಿ ದೇವೋತ್ತಮನ ಚರಣಗಳಿಗೆ ತನು-ಮನಗಳೊಂದಿಗೆ ಅರ್ಪಿಸಿಕೊಂಡಿದ್ದಳಾಕೆ..ಪ್ರತಿಯೊಂದು ಚರಾಚರಗಳಲ್ಲೂ ಅವನನ್ನೇ ಕಾಣುತ್ತಿದ್ದಳಾಕೆ..ಅವನ ಕೊಳಲಿನ ದನಿಗೆ ಚಾತಕ ಪಕ್ಷಿ ಮಳೆಯ ನಿರೀಕ್ಷೆಯಲ್ಲಿ ಕಾಯುವಂತೆ  ಪರಿತಪಿಸುತ್ತಿದ್ದಳಾಕೆ..ಬರೀ ಅವನಿಗಾಗಿ,ಅವನ ಕೊಳಲಿನ ದನಿಗಾಗಿಯಷ್ಟೇ.....ಅವನನ್ನು ಪಡೆಯಬೇಕೆಂಬ ಹಂಬಲವಷ್ಟೇ ಆಕೆಯಲ್ಲಿ,ಅವನ ಕಣ್ಣಲ್ಲಿ ತನ್ನ ತಾನು ಕಾಣಬೇಕೆಂಬ ಕೋರಿಕೆಯಷ್ಟೇ ಮನಸ್ಸಿನಲ್ಲಿ...
         
            ಕೃಷ್ಣ., ಆತನಿಗಾಗಿ ಪ್ರತೀ ನಿಮಿಷವೂ ತುಡಿತ,ಅದ್ಯಾರೇ ಬರಲು ಅವನೇ ಬಂದನೆಂಬ ನಿರೀಕ್ಷೆ ಅವಳ ಕಣ್ಗಳಲ್ಲಿ,ಬಾಯಲ್ಲಿ ಅವನದೇ ಸುದ್ದಿ ಪಟ-ಪಟನೇ ಮುತ್ತು ಸುರಿದಂತೆ ಬರುತ್ತಿತ್ತು,ಯಾರೇ ಬರಲಿ ಅವನ ಬಗೆಗಿನ ತನ್ನ ಪರಿತಾಪವನ್ನುವ್ಯಕ್ತಪಡಿಸುವ ಪರಿ.. ಅನ್ನಿಸುವುದಂತೂ ನಿಜ ಇವಳೆಂತಾ ಹುಚ್ಚಿ..,ಅಲ್ಲ ಅಲ್ಲ ಆ ಕೃಷ್ಣನೆಂತಾ ಮೋಡಿಗಾರ....!!ಅವಳೆಲ್ಲಾ ಕನಸುಗಳಲ್ಲಿ ತನ್ನನ್ನು ಮಾತ್ರಾ ಆವರಿಸಿಕೊಂಡಿದ್ದ,ಅವಳ ಮನಸ್ಸಲ್ಲಿ ತನ್ನ ನೆಲೆಯನ್ನಷ್ಟೇ ಬಿತ್ತರಿಸಿಕೊಂಡಿದ್ದ, ಅವಳ ಪ್ರೀತಿ-ವಿರಹಗಳ ಅಧಿಕೃತ ಅಧಿಕಾರಿಯಾಗಿದ್ದ ಕೃಷ್ಣನೆಂತಾ ಮೋಡಿಗಾರ ಎಂಬ ಪ್ರಶ್ನೆ ಬರಬೇಕಾದ್ದೇ...!!      

   ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವಾ..!ಕೊಟ್ಟದ್ದು ಬರಿಯ ಮಾತನ್ನಷ್ಟೇ,ರಾಧೆಯ ಉಸಿರಿನ ಏರು ಪೇರುಗಳಲ್ಲಿ ಬರೀ ನೆನಪುಗಳಾಗಿಯಷ್ಟೇ ಉಳಿದು,ತಾನು ಮರೆಯಾಗಿದ್ದ....!         ಎಲ್ಲಾ  ಜೀವಿಗಳ ಜೀವಾತ್ಮನಾಗಿರುವವನು ರಾಧೆಯ ಪ್ರೀತಿಯನ್ನು ತಿಳಿದೂ ದೂರವಾದನೇ..??ಕಾರಣವಿದ್ದು ಅನಿವಾರ್ಯವಾಗಿ ಗೆಳತಿಯನ್ನು ಬಿಟ್ಟು ಹೊರಟನೇ..??ಕೊನೆಗೆ ತಾನಿರದ ರಾಧೆಯ ಪರಿಸ್ಥಿತಿಯ ಅರಿವಿದ್ದೂ ಮೂಖವಾಗಿ ಮರೆಯಾದನೇ....??    
         
                  ......ಮಹಾಪ್ರವಾಹ.....ಮಹಾಪ್ರವಾಹ ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ..ತೊರೆದರು ತನ್ನ, ತೊರೆಯದು ಪ್ರಿಯನ ರಾಧೆಯ ಪ್ರೀತಿಯ ರೀತಿ..ಸಾಲುಗಳೇಕೋ ಮನದಲ್ಲಿ ಗುನುಗುನಿಸಿ ಮರೆಯಾಗಿತ್ತು,.ರಾಧೆಯ ಪ್ರೀತಿಯ ಪರಿ ಒಮ್ಮೆ ಹೊಟ್ಟೆಕಿಚ್ಚು ತರಿಸಿ ದೂರವಾಗಿತ್ತು.....ಕೊನೆಯದಾಗಿ ರಾಧೆಯ ನಿಶ್ಕಲ್ಮಶ ಪ್ರೀತಿಯ ಗಟ್ಟಿತನಕ್ಕೆ,ತ್ಯಾಗದ ಉದಾರತೆಗೆ,ಕೃಷ್ಣನ ಬರುವನ್ನೇ ಕಾಯುತ್ತಾ ಕುಳಿತಿರುವ ಅವಳುಸಿರಿನ ತಾಳ್ಮೆಗೆ ಮನಸ್ಸೊಮ್ಮೆ ಶ್ಲಾಗಿಸಿತ್ತು..........